ರಾಜಶೇಖರ ಭೂಸನೂರಮಠ (ರಾಭೂ) (೧೬ ಜನವರಿ ೧೯೩೮ - ೧೨ ಎಪ್ರಿಲ್ ೨೦೧೫) ಕನ್ನಡದ ವಿಜ್ಞಾನ ಸಾಹಿತಿ, ಕಥೆ ಹಾಗೂ ಕಾದಂಬರಿಗಾರ. ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ, ಅದರಲ್ಲೂ ಪ್ರಮುಖವಾಗಿ ವಿಜ್ಞಾನ ಕಥೆ ಕಾದಂಬರಿಗಳ ರಚನೆ ಮೂಲಕ ಗಣನೀಯ ಕೊಡುಗೆ ನೀಡಿದ್ದಾರೆ. ರಾಭೂ ಅವರು, ಕಾದಂಬರಿಕಾರ, ಕತೆಗಾರ, ನಾಟಕಕಾರ, ಪ್ರಬಂಧಕಾರ, ವಿಮರ್ಶಕ, ಭಾಷಾಂತರಕಾರರಾಗಿಯೂ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು. ಅವರ ಹುಟ್ಟೂರು ಹುಬ್ಬಳ್ಳಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ನಿಡಗುಂದಿಯವರಾದ ರಾಜಶೇರ ಭೂಸನೂರಮಠ ರಾಭೂ ಎಂದೇ ಪರಿಚಿತರಾಗಿದ್ದರು. ಇವರ ತಂದೆ ಪ್ರಸಿದ್ಧ ಸಂಶೋಧಕ ಪ್ರೊ.ಸಂ.ಶಿ.ಭೂಸನೂರಮಠ. ರಾಜ್ಯ ವಿಜ್ಞಾನ ಪರಿಷತ್ತಿನ ಸಂಸ್ಥಾಪಕ ಸದಸ್ಯರಾಗಿ ಆನಂತರ ರಾಜ್ಯ ಉಪಾಧ್ಯಕ್ಷರಾಗಿದ್ದ ಅವರು, ಅಮೆರಿಕನ್ ಬಯಾಗ್ರಾಫಿಕಲ್ ಇನ್‍ಸ್ಟಿಟ್ಯೂಟ್ ವತಿಯಿಂದ ೧೯೯೯ರಲ್ಲಿ ವರ್ಷದ ವ್ಯಕ್ತಿ, ೨೦೦೦ರಲ್ಲಿ ಯುನಿವರ್ಸಲ್ ಅವಾರ್ಡ್ ಆಫ್ ಅಕಂಪ್ಲಿಷಮೆಂಟ್ ಪ್ರಶಸ್ತಿ ಪಡೆದಿದ್ದಾರೆ. == ಕೃತಿಗಳು (ಅಪೂರ್ಣ ಪಟ್ಟಿ) == ಕನ್ನಡದಲ್ಲಿ ೮೦ ಮತ್ತು ಇಂಗ್ಲಿಷಿನಲ್ಲಿ ೨೦ ಪುಸ್ತಕಗಳು ಪ್ರಕಟವಾಗಿವೆ. ಮಕ್ಕಳಿಗಾಗಿ ಕಥೆ, ಕಾದಂಬರಿ, ಕಾಮಿಕ್ಸ್ ಹೀಗೆ ೧೫ ಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. == ನಿಧನ == ಪ್ರೊ.ರಾಜಶೇಖರ ಭೂಸನೂರಮಠ ಅವರು ಎಪ್ರಿಲ್ ೧೨, ೨೦೧೫ರಂದು ಧಾರವಾಡದ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. == ಉಲ್ಲೇಖಗಳು == == ಹೊರಸಂಪರ್ಕಕೊಂಡಿಗಳು == ಪ್ರೊ. ಎಸ್.ಎಸ್. ಭೂಸನೂರಮಠರ ಬಗ್ಗೆ ಮಲ್ಲಿಕಾರ್ಜುನ ಕುಂಬಾರರ ಕೃತಿ, ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಣೆ